ಮಾಸ್ಟರ್ ಸಿನಿಮಾದ ವಿಲನ್ ವಿಜಯ್ ಸೇತುಪತಿ ಇದೀಗ ತಾವೇ ಮಾಸ್ಟರ್ ಆಗುತ್ತಿದ್ದಾರೆ. ವಿಸಾರಣೈ, ಅಸುರನ್ ಮುಂತಾದ ಅದ್ಭುತ ಸಿನಿಮಾಗಳ ನಿರ್ದೇಶಕ ವೆಟ್ರಿಮಾರನ್ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದಾರೆ. ಈ ಬಾರಿ ತಮ್ಮ ನೆಚ್ಚಿನ ನಟ ಧನುಷ್ ಬದಲಿಗೆ ವಿಜಯ್ ಸೇತುಪತಿ ಜೊತೆ ಸಿನಿಮಾ ಮಾಡಲಿದ್ದಾರೆ ವೆಟ್ರಿ. ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ‘ವಿದುತಲೈ’ ಎನ್ನುವ ಚಿತ್ರಕ್ಕೆ ಈ ಜೋಡಿ ಕೈಹಾಕಿದೆ. ಅಂದ್ಹಾಗೆ ವಿದುತಲೈ ಎಂದರೆ ಮಾಸ್ಟರ್ ಅಥವಾ ಶಿಕ್ಷಕ ಎಂದರ್ಥ.


ಮೂಲ ತಮಿಳಿನ ಈ ಸಿನಿಮಾ ದಕ್ಷಿಣ ಭಾರತೀಯ ಭಾಷೆಗಳು ಸೇರಿ ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ. ಸದ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಹುಟ್ಟಿಸಿದೆ. ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಲ್ರೆಡ್ ಕುಮಾರ್ ಅವರ ಆರ್ ಎಸ್ ಇಂಫೋಟೈನ್ಮೆಂಟ್ ಪ್ರೊಡಕ್ಷನ್ಸ್ ವತಿಯಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲದೆ, ಈ ಚಿತ್ರಕ್ಕೆ ಮ್ಯೂಸಿಕ್ ಮ್ಯಾಸ್ಟ್ರೋ ಇಳಯರಾಜ ಸಂಗೀತ ನೀಡಲಿದ್ದು, ವೆಟ್ರಿ ಮಾರನ್ ಮತ್ತು ಇಳಯರಾಜಾ ಇದೇ ಮೊದಲ ಬಾರಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ.


ವಿದುತಲೈ ಚಿತ್ರದ ಸಂಪೂರ್ಣ ಶೂಟಿಂಗ್ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಈಗಾಗಲೇ ಲೊಕೇಶನ್ ಫೈನಲ್ ಮಾಡಲಾಗಿದ್ದು, ವಿದ್ಯುತ್ ಮತ್ತು ಫೋನ್ ನೆಟ್ವರ್ಕ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ. ಅಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಕಳೆಯಲಿದೆಯಂತೆ. ಈಗಾಗಲೇ ಅಸುರನ್ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ನಿರ್ದೇಶಕ ವೆಟ್ರಿಮಾರನ್, ಇದೀಗ ವಿದುತಲೈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ. ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ವೆಲರಾಜ್ ಛಾಯಾಗ್ರಹಣ, ಆರ್. ರಮರ್ ಸಂಕಲನ, ಪಿಟರ್ ಹೇನ್ ಸಾಹಸ ನಿರ್ದೇಶನ, ಜಾಖಿ ಅವರ ಕಲಾ ನಿರ್ದೇಶನ ಇರಲಿದೆ.


ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಖಾಕಿಯ ನಡುವಿನಿಂದ ಬೇಡಿ ಹಾಕಿದ ಕೈಯಲ್ಲಿ ಟೀ ಗ್ಲಾಸ್ ಹಿಡಿದು ಗುರಾಯಿಸುತ್ತಿರುವ ವಿಜಯ್ ಸೇತುಪತಿ ಕಾಣಿಸುತ್ತಾರೆ. ಇದು ಚಿತ್ರದ ಕಥೆಯ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸುವಂತಿದೆ. ಥ್ರಿಲ್ಲರ್ ಸಿನಿಮಾ, ವೆಟ್ರಿಮಾರನ್ ಡೈರೆಕ್ಷನ್, ಇಳಯರಾಜಾ ಮ್ಯೂಸಿಕ್, ವಿಜಯ್ ಸೇತುಪತಿ ನಾಯಕ…ಒಂದು ಅದ್ಭುತ ಸಿನಿಮಾಗಾಗಿ ಪ್ರೇಕ್ಷಕ ನಂಬಿಕೆಯಿಂದ ಕಾಯಬಹುದು.